
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಪ್ರೀ ವೆಡ್ಡಿಂಗ್ ಶೂಟ್ಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವರ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ನಿವಾಸಿ ಮನು ಮೃತ ವರ ಎಂದು ಗುರುತಿಸಲಾಗಿದೆ. ಇವರಿಗೆ ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಮೇ 10ರಂದು ವಿವಾಹ ನೆರವೇರಬೇಕಿತ್ತು.
ಇಬ್ಬರ ಮನೆಯಲ್ಲೂ ಮದುವೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಸಂಭ್ರಮದ ವಾತಾವರಣ ಮನೆಮಾತಾಗಿತ್ತು. ಇಂದು ಬೆಳಿಗ್ಗೆ ಮನು ಅವರು ಮದುವೆ ಆಗುವ ಯುವತಿಯನ್ನ ಪ್ರೀ ವೆಡ್ಡಿಂಗ್ ಶೂಟ್ಗೆ ಕರೆದುಕೊಂಡು ಹೋಗಲು ಕಾರಿನಲ್ಲಿ ಹೊರಟಿದ್ದರು.
ಮೂಗಲಿ ಗ್ರಾಮದ ಸಮೀಪ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅಪಘಾತದ ತೀವ್ರತೆಗೆ ಮನು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಭ್ರಮದಿಂದ ಕಂಗೊಳಿಸಬೇಕಿದ್ದ ಎರಡೂ ಕುಟುಂಬಗಳಲ್ಲಿ ಇದೀಗ ಶೋಕ ಆವರಿಸಿದ್ದು, ಮದುವೆ ಮನೆಗಳು ಸೂತಕದ ವಾತಾವರಣದಲ್ಲಿ ಮುಳುಗಿವೆ.















