
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಿಈಟಿ, ಎನ್ಈಈಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಬಹು ಪ್ರತಿಭೆಗಳ ವಿಕಸನಕ್ಕೆ ದಾರಿ ಮಾಡಿಕೊಡಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಈ ತರಬೇತಿ ಪಡೆದು ಭವಿಷ್ಯ ಜೀವನದಲ್ಲಿ ಯಶಸ್ಸು ಹೊಂದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಜೀವನದ ಮೊದಲ ಘಟ್ಟ’ ಎಂದು ಆದಿಚುಂಚನಗಿನ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಶೃಂಗೇರಿಯ ಆದಿಚುಂಚನಗಿರಿಯ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಸೋಮವಾರ ಅಯೋಜಿಸಿದ ಸಿಈಟಿ, ಎನ್ಈಈಟಿ ವಿದ್ಯಾರ್ಥಿಗಳ ವಾರ್ಷಿಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
`ಸ್ಪರ್ಧಾತ್ಮಕ ಪರೀಕ್ಷೆಗಳು ಉದ್ಯೋಗ, ಸಂದರ್ಶನ ಮತ್ತು ಜೀವನ ನಿರ್ವಹಣೆಯಲ್ಲಿ ಸಹಕಾರಿ ಆಗಲಿವೆ. ಇಲ್ಲಿ ತರಬೇತಿ ಪಡೆದವರು ಅನ್ಯ ಕಾಲೇಜಿನ ವಿದ್ಯಾರ್ಥಿಗಳ ಹೋಲಿಕೆಯಲ್ಲಿ ವಿಭಿನ್ನವಾಗಿ ನಿಂತು ಸಮಾಜಕ್ಕೆ ಮಾದರಿ ಆಗಬೇಕು. ಪಡೆದ ತರಬೇತಿಯ ಫಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಬಗ್ಗೆ ಪದವಿ ವ್ಯಾಸಂಗದ ವೇಳೆಯಲ್ಲೇ ಧೃಢ ನಿರ್ಧಾರ ಮಾಡಿ ಅಧ್ಯಯನಕ್ಕೆ ಮುನ್ನಡಿ ಇಡಬೇಕು. ಸುತ್ತಮುತ್ತ ನಡೆಯುವ ಘಟನೆಗಳ ಕುರಿತು ಸಾಮಾನ್ಯ ಜ್ಞಾನವನ್ನು ಸಂಪಾದಿಸಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶಾಲಿಗಳಾಗುವುದು ಒಂದು ಸವಾಲಾಗಿದ್ದು ಇದಕ್ಕಾಗಿ ಭಾವಿ ಅಭ್ಯರ್ಥಿಗಳು ತಮ್ಮ ಪದವಿ ವ್ಯಾಸಂಗದ ವೇಳೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಯಾರಿ ಮಾಡಿಕೊಳ್ಳಬೇಕು. ಕಾಲೇಜು ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಹಲವು ಸ್ಪರ್ಧೆ, ಕಾರ್ಯಾಗಾರ, ವಿಚಾರ ಸಂಕಿರಣ, ಸಮಯ ನಿರ್ವಹಣೆ ಮೊದಲಾದ ಪರೀಕ್ಷೆಗಳು ಎದುರಾಗುತ್ತವೆ. ಆಗ ಇಲ್ಲಿ ನೀಡಿದ ತರಬೇತಿಯು ನಿಮ್ಮ ನೆರವಿಗೆ ಬರುವುದು ಎಂದರು.
ಬಿಜಿಎಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಸುರೇಂದ್ರ ರೆಡ್ಡಿ ಮಾತನಾಡಿ, `ಜೀವನದಲ್ಲಿ ಗುರಿ ಮುಟ್ಟಬಲ್ಲೆ ಎಂಬ ಆತ್ಮವಿಶ್ವಾಸವಿರಬೇಕು. ಆಗ ವಿದ್ಯಾರ್ಥಿಯ ಜೊತೆಗೆ ಕಾಲೇಜಿಗೂ ಕೀರ್ತಿ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜಯಶಾಲಿಗಳಾಗುವುದು ಒಂದು ಸವಾಲಾಗಿದ್ದು ಇದಕ್ಕಾಗಿ ಭಾವಿ ವಿದ್ಯಾರ್ಥಿಗಳು ತಮ್ಮ ಪದವಿ ವ್ಯಾಸಂಗದ ವೇಳೆಯಲ್ಲೇ ಸೂಕ್ತ ಪೂರ್ವಭಾವಿ ತಯಾರಿ ಮಾಡಿಕೊಳ್ಳಬೇಕು ಎಂದರು.
ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ ನಾಗೇಶ್ ಮಾತನಾಡಿ, `ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕ್ರಿಯಾಶೀಲರಾಗಬೇಕು. ಸಮಾಜದ ಒಳಿತಿಗಾಗಿ ಸೇವಾಭಾವ ಅಳವಡಿಸಬೇಕು. ಒಂದೇ ಸಮವಸ್ತ್ರ ಧರಿಸಿ ಒಗ್ಗಟ್ಟಾಗಿ ಕಲಿತ ವಿದ್ಯಾರ್ಥಿಗಳು ಸೌಹಾರ್ದಯುತ ಬಾಳ್ವೆಯನ್ನು ಕಲಿಯಲು ಇಲ್ಲಿ ಮಾತ್ರ ಸಾಧ್ಯವಾಗುತ್ತದೆ. ದೇಶದ ಉನ್ನತಿಗೆ ಯುವಪೀಳಿಗೆ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಪಕರಾದ ನಂದಿನಿ, ಕಾವ್ಯ, ಸಂಕೇತ್, ಸಂಧೀಪ್, ಫಾತಿಮಾ, ನಮನಾ, ಲಾಸ್ಯ, ರಜೀತ್ ಗೌಡ, ರುದ್ರೇಶ್ ಮತ್ತು ವಿದ್ಯಾರ್ಥಿಗಳು ಇದ್ದರು.













