
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಫಿ ಮತ್ತು ಟೀ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹಿಂಡು ಹಿಂಡಾಗಿ ಎಸ್ಟೇಟ್ಗಳಿಗೆ ನುಗ್ಗುತ್ತಿರುವ ಕಾಡುಕೋಣಗಳು ಕೃಷಿ ನಾಶಪಡಿಸುತ್ತಿರುವುದಲ್ಲದೆ, ಸಾರ್ವಜನಿಕರ ಜೀವಕ್ಕೂ ಸಂಚಕಾರ ತರುತ್ತಿವೆ.
ಕೊಪ್ಪ ತಾಲೂಕಿನ ಎಲೆಮಡಲು ಸಮೀಪದ ಟೀ ಎಸ್ಟೇಟ್ವೊಂದರಲ್ಲಿ ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದ್ದು, ಹಚ್ಚಹಸಿರಿನ ಟೀ ಸೊಪ್ಪನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಎಸ್ಟೇಟ್ ತುಂಬಾ ಕಾಡುಕೋಣಗಳೇ ತುಂಬಿಕೊಂಡಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಕಳಸ ತಾಲೂಕಿನಲ್ಲಿ ಕಾಡುಕೋಣಗಳ ನಡುವಿನ ಕಾದಾಟವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಎರಡು ಕಾಡುಕೋಣಗಳ ನಡುವೆ ನಡೆದ ಭೀಕರ ಜಗಳದ ವೇಳೆ, ಒಂದು ಕಾಡುಕೋಣ ಸುಮಾರು 50 ಅಡಿ ಎತ್ತರದ ಪ್ರಪಾತಕ್ಕೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಈ ಕಾಡುಕೋಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದರೂ ಸಹ, ಚಿಕಿತ್ಸೆ ಫಲಕಾರಿಯಾಗದೆ ಅದು ಮೃತಪಟ್ಟಿದೆ.














