
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜನ್ಮದಿನದ ಔತಣ ಕೂಟದಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಮೃತಪಟ್ಟ ಘಟನೆ ತಾಲೂಕಿನ ಕುಂಸಿ ಸಮೀಪದ ಚನ್ನಹಳ್ಳಿಯಲ್ಲಿ ನಡೆದಿದೆ. ಸಚಿನ್ (21) ಮೃತ ಯುವಕ.
ಗ್ರಾಮಸ್ಥರೊಬ್ಬರು ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ನಿರ್ಮಾಣ ಹಂತದ ಮನೆ ಬಳಿ ಔತಣಕೂಟ ಏರ್ಪಡಿಸಿದ್ದರು. ಅಲ್ಲಿಗೆ ಬಂದಿದ್ದ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದ. ಊರಿನವರೆಲ್ಲರೂ ಊಟ ಮುಗಿಸಿ ಮನೆಗೆ ಹೋಗಿದ್ದಾರೆ.

ಮನೆ ಕಾಮಗಾರಿ ಮಾಡುವ ಕೆಲಸಗಾರರು ಸ್ಥಳಕ್ಕೆ ಬಂದಾಗ ಸಚಿನ್ ಮೃತಪಟ್ಟಿರುವುದು ಕಂಡಿದೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ಕಾರಣ ತಿಳಿಯಲಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















