ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಬಿಳಾಲು ಕೊಪ್ಪ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆಗಳ ಗುಂಪು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟುಮಾಡಿದೆ.
ಗ್ರಾಮದ ಊರ್ಮಿಸ್ ಎಂಬುವರಿಗೆ ಸೇರಿದ ತೋಟಕ್ಕೆ ನುಗ್ಗಿದ ಕಾಡಾನೆಗಳು ಸುಮಾರು 60 ಅಡಿಕೆ ಮರಗಳು, 30 ತೆಂಗಿನ ಮರಗಳು ಹಾಗೂ 50 ಬಾಳೆ ಗಿಡಗಳನ್ನು ನಾಶಪಡಿಸಿವೆ. ಅಲ್ಲದೆ ಮನೆಯ ಮುಂಭಾಗದಲ್ಲಿದ್ದ ಕಬ್ಬಿಣದ ಗೇಟ್ನ್ನು ಮುರಿದು ಹಾನಿಗೊಳಿಸಿವೆ. ಇದೇ ವೇಳೆ ನಾಗರಾಜ್ ಎಂಬುವರ ತೋಟಕ್ಕೂ ನುಗ್ಗಿದ ಕಾಡಾನೆಗಳ ಗುಂಪು ಸುಮಾರು 150 ಅಡಿಕೆ ಮರಗಳು, 50 ತೆಂಗಿನ ಮರಗಳು ಹಾಗೂ 250 ಬಾಳೆ ಗಿಡಗಳನ್ನು ತುಳಿದು ಹಾಳು ಮಾಡಿದೆ.

ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ಹಾನಿಯ ಮೌಲ್ಯಮಾಪನ ಕೈಗೊಂಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ವರದಿ- ಗುರು ಎಮ್. ಸಿ)














