ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) 2026ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ಪ್ರತಿಷ್ಠಿತ ‘ಮೆಡಲ್ ಫಾರ್ ಮೆರಿಟೋರಿಯಸ್ ಸರ್ವಿಸ್’ ಪದಕಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ಆಯ್ಕೆಯಾಗಿದ್ದಾರೆ.
ತರೀಕೆರೆ ಉಪವಿಭಾಗ ಕಚೇರಿಯ ಸಿ.ಹೆಚ್.ಸಿ. ಶ್ರೀ ಅಬ್ದುಲ್ ಕಮಾಲ್ ಎ. ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ತಾಂತ್ರಿಕ ವಿಭಾಗದ ಎ.ಹೆಚ್.ಸಿ. ಶ್ರೀ ಅಬ್ದುಲ್ ರಬ್ಬಾನಿ ಅವರು ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಉತ್ತಮ ಸೇವೆಗಾಗಿ ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ.

ಇಬ್ಬರೂ ಸಿಬ್ಬಂದಿಯ ಶ್ರದ್ಧೆ, ಸೇವಾ ಮನೋಭಾವ ಮತ್ತು ಕರ್ತವ್ಯ ಬದ್ಧತೆಯನ್ನು ಗುರುತಿಸಿ 2026ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪದಕ ಪ್ರದಾನ ಮಾಡಲಾಗುತ್ತಿದೆ.

ಇಬ್ಬರು ಸಿಬ್ಬಂದಿ ಈ ಗೌರವಕ್ಕೆ ಆಯ್ಕೆಯಾಗಿರುವುದಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಹರ್ಷ ವ್ಯಕ್ತಪಡಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದೆ. ಇವರ ಸಾಧನೆ ಹಾಗೂ ಸೇವಾ ಬದ್ಧತೆ ಜಿಲ್ಲೆಯ ಇತರ ಪೊಲೀಸ್ ಸಿಬ್ಬಂದಿಗೂ ಪ್ರೇರಣೆಯಾಗಲಿ ಎಂದು ಇಲಾಖೆ ಶುಭ ಹಾರೈಸಿದೆ.














