ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಹೃದಯಾಘಾತವಾಗಿದ್ದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ತಂದಾಗ ಅವರು ಮೃತಪಟ್ಟಿದ್ದು, ಮೃತದೇಹವನ್ನು ಆಸ್ಪತ್ರೆಯಿಂದ ಹೊರತಂದಾಗ ಅವರ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳು ಕಾಣೆಯಾಗಿವೆ ಎಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಮೂಡಿಗೆರೆ ತಾಲ್ಲೂಕಿನ ತಳವಾರ ಗ್ರಾಮದ ಶಮಂತ್ ಎಂಬುವವರು ಮೂಡಿಗೆರೆ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?:
ದಿನಾಂಕ 23-10-2023 ರಂದು ತಳವಾರದ ನಮ್ಮ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ನನ್ನ ಆಪ್ತ ಸ್ನೇಹಿತರಾದ ಶೇಖರ್ ಮತ್ತು ಅವರ ಹೆಂಡತಿ ಅನಿತ, ತಾಯಿ ಲಕ್ಷ್ಮಿದೇವಿ ಹಾಗೂ ಅವರ ಕುಟುಂಬದವರೊಂದಿಗೆ ನನ್ನ ಮನೆಗೆ ಬಂದಿರುತ್ತಾರೆ. ಮರುದಿನ ದಿನಾಂಕ 24-10-2023 ರಂದು ಬೆಳಿಗ್ಗೆ 06-00 ಗಂಟೆಯ ಸಮಯದಲ್ಲಿ ಲಕ್ಷ್ಮಿದೇವಿಯವರಿಗೆ ತೀವ್ರವಾಗಿ ಹೃದಯಾಘಾತವಾದ ಕಾರಣ ಶೇಖರ್ ರವರ ಕಾರಿನಲ್ಲಿ ನಾನು, ಅನಿತ, ಕೆಂಪರಾಜು ರವರು ತಳವಾರದಿಂದ ಮೂಡಿಗೆರೆ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಗೆ ಸುಮಾರು 06-30 ಗಂಟೆ ಸಮಯಕ್ಕೆ ಕರೆದುಕೊಂಡು ಬಂದಿರುತ್ತೇವೆ. ನಂತರ ಆಸ್ವತ್ರೆಯ ಸಿಬ್ಬಂದಿಗಳು ತಕ್ಷಣ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ರೂಂಮಿನ ಒಳಗೆ ತಪಾಸಣೆ ನಡೆಸಲು ಕರೆದುಕೊಂಡು ಹೋಗಿರುತ್ತಾರೆ, ತುರ್ತು ಚಿಕಿತ್ಸಾ ವಿಭಾಗದ ರೂಂಮಿನ ಒಳಗೆ ಕರೆದುಕೊಂಡು ಹೋಗುವಾಗ ಲಕ್ಷ್ಮಿ ದೇವಿಯವರ ಎರಡೂ ಕೈಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚಿನ್ನದ ಬಳೆಗಳು ಧರಿಸಿದ್ದರು.

ಇದನ್ನೂ ಓದಿ; ಕೃಷಿಕರಿಗೆ ಸಿಹಿ ಸುದ್ದಿ..!; ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿ ಅನುಮೋದನೆ; ಈ ತಿಂಗಳ ವರೆಗೆ ಸಬ್ಸಿಡಿ ಲಭ್ಯ
ಹಿಂದಿನ ದಿನ ನಮ್ಮ ಮನೆಯ ಕಾರ್ಯಕ್ರಮದಲ್ಲಿ ತೆಗೆದ ಪೊಟೊದಲ್ಲಿಯೂ ಸಹ ಲಕ್ಷ್ಮಿದೇವಿಯವರ ಎರಡೂ ಕೈಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚಿನ್ನದ ಬಳೆಗಳು ಧರಿಸಿರುವುದು ಕಂಡು ಬಂದಿರುತ್ತದೆ. ಬೆಳಿಗ್ಗೆ 06-30 ಗಂಟೆಯ ಸಮಯದಲ್ಲಿ ನಾವುಗಳು ಬಂದಾಗ ಆಸ್ವತ್ರೆಯ ಸಿಬ್ಬಂದಿಗಳು ಲಕ್ಷ್ಮಿದೇವಿರವರನ್ನು ಚಿಕಿತ್ಸೆಗೆಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ಅವರ ಎರಡು ಕೈಗಳಲ್ಲಿ ನಾಲ್ಕು ಬಳೆಗಳು ಇರುವುದನ್ನು ನಾವು ಗಮನಿಸಿರುತ್ತೇವೆ. ನಂತರ ವೈದ್ಯರು ಪರೀಕ್ಷಿಸಿ ಲಕ್ಷ್ಮಿದೇವಿಯವರು ಮೃತಪಟ್ಟಿರವುದಾಗಿ ತಿಳಿಸಿದ್ದು, ಮೃತದೇಹವನ್ನು ತುರ್ತು ಚಿಕಿತ್ಸಾ ವಿಭಾಗದಿಂದ ಹೊರಗಡೆ ತೆಗೆದುಕೊಂಡು ಬರುವ ಸಮಯದಲ್ಲಿ ಅನಿತ, ಕೆಂಪರಾಜು ಮತ್ತು ನಾನು ಮೃತದೇಹವನ್ನು ನೋಡಿದಾಗ ಲಕ್ಷ್ಮಿದೇವಿಯ ಎರಡು ಕೈಗಳಲ್ಲಿ ಒಂದೊಂದು ಬಳೆಗಳು ಮಾತ್ರ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಲಕ್ಷ್ಮಿದೇವಿಯವರ ಸೊಸೆ ಅನಿತಾರವರು ಆಸ್ವತ್ರೆಯ ಸಿಬ್ಬಂದಿಗಳನ್ನು ವಿಚಾರ ಮಾಡಿದಾಗ ನಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ.
ಆದ್ದರಿಂದ ಲಕ್ಷ್ಮಿದೇವಿಯವರ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆಗಳಲ್ಲಿ ಎರಡು ಚಿನ್ನದ ಬಳೆಗಳನ್ನು ತುರ್ತು ಚಿಕಿತ್ಸಾ ವಿಭಾಗದ ಒಳಗೆ ಯಾರೋ ಕಳವು ಮಾಡಿರುವ ಬಗ್ಗೆ ಅನುಮಾನವಿರುತ್ತದೆ. ಸದರಿ ಎರಡು ಚಿನ್ನದ ಬಳೆಗಳು ಸುಮಾರು 35 ರಿಂದ 40 ಗ್ರಾಂ ತೂಕವಿರುವುದಾಗಿ ಲಕ್ಷ್ಮಿ ದೇವಿಯವರ ಮಗನಾದ ಶೇಖರ್ ರವರು ತಿಳಿಸಿರುತ್ತಾರೆ. ಅವುಗಳ ಒಟ್ಟು ಬೆಲೆ ಸುಮಾರು 2 ಲಕ್ಷ ರೂಪಾಯಿಗಳಾಗಿರುತ್ತದೆ. ಈ ಬಗ್ಗೆ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಣೆ ಮಾಡಿ, ಸಿ ಸಿ ಕ್ಯಾಮರವನ್ನು ಪರಿಶೀಲಿಸಿ, ಕಳುವಾದ ಚಿನ್ನದ ಬಳೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ವರದಿ- ತನು ಕೊಟ್ಟಿಗೆಹಾರ
Balehonnur | ಕಾಂಬೋಡಿಯಾ ದೇಶದಲ್ಲಿ ಕೆಲಸಕ್ಕೆ ತೆರಳಿದ ಬಾಳೆಹೊನ್ನೂರು ಯುವಕ ಮಾಲೀಕರ ಬಳಿ ಬಂಧಿ
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವಿದೇಶಕ್ಕೆ ಕೆಲಸಕ್ಕೆ ಹೋದ ಯುವಕನೊಬ್ಬ ಬ್ರೋಕರ್ಗಳಿಂದ ಮೋಸ ಹೋಗಿ ಮಾಲೀಕರ ಬಳಿ ಸಿಲುಕಿಕೊಂಡು ಸ್ವದೇಶಕ್ಕೆ ವಾಪಾಸ್ ಬರಲಾಗದೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಡಾಟಾ ಎಂಟ್ರಿ ಆಪರೇಟರ್ ಕೆಲಸ, ಹೆಚ್ಚು ಹಣದ ಆಸೆ ತೋರಿಸಿ ನನ್ನ ಮಗನನ್ನು ಭರತ್, ನಿಕ್ಷೇಪ್ ಕರೆದೊಯ್ದು ಕಾಂಬೋಡಿಯದಲ್ಲಿ ಬೇರೆಯವರಿಂದ ಹಣ ಪಡೆದು ನನ್ನ ಮಗನನ್ನು ವಂಚಕರಿಗೆ ಮಾರಾಟ ಮಾಡಿದ್ದಾರೆ. ಕೂಡಲೇ ಈ ಇಬ್ಬರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಲ್ಲಿ ನನ್ನ ಮಗನನ್ನು ವಾಪಾಸ್ ಕರೆತರಲು ಸಾಧ್ಯವಿದೆ. ಇಲ್ಲದಿದ್ದರೆ ಅವನ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಸರ್ಕಾರ ನನ್ನ ಮಗನನ್ನು ರಕ್ಷಣೆ ಮಾಡಿಕೊಡಬೇಕು – ಸುರೇಶ್, ಯುವಕ ಅಶೋಕ್ ತಂದೆ.
ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರೂ. 3 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ಮನವಿ ಸಲ್ಲಿಸಿ ಅಶೋಕ್ನನ್ನು ಕಾಂಬೋಡಿಯಾಕ್ಕೆ ಕರೆದುಕೊಂಡು ಹೋದ ನಿಕ್ಷೇಪ್, ಭರತ್ ಪೋಷಕರನ್ನು ಠಾಣೆಗೆ ಕರೆಯಿಸಿ ಅವರನ್ನು ವಿಚಾರಣೆ ಮಾಡಿ ಅಶೋಕ್ನನ್ನು ವಾಪಾಸ್ ಕರೆಯಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಒಟ್ಟಾರೆಯಾಗಿ ಕೆಲಸ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ.













