ಆಲ್ದೂರು: (ನ್ಯೂಸ್ ಮಲ್ನಾಡ್ ವರದಿ) ವಿವಾಹ ಸಮಾರಂಭದಲ್ಲಿ ವಧುವಿಗೆ ವರನ ಕಡೆಯವರು ನೀಡಿದ್ದ ಚಿನ್ನವನ್ನು ಖದೀಮರು ಎಗರಿಸಿರುವ ಘಟನೆ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಗ್ರಾಮದಲ್ಲಿರುವ ದಿ ರಾಯಲ್ ಶಾಲಿಮಾರ್ ಹಾಲ್ ನಲ್ಲಿ ಬುಧವಾರ ನಡೆದಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಶಾಲಿಮಾರ್ ಹಾಲ್ ನಲ್ಲಿ ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ವಧು ಮತ್ತು ಹ್ಯಾರಗುಡ್ಡೆ ಗ್ರಾಮದ ವರನ ವಿವಾಹ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು. ಈ ವೇಳೆ ವರನ ಕಡೆಯವರು ವಧುವಿಗೆ ನೀಡಿದ್ದ ಆಭರಣಗಳನ್ನು ಖದೀಮರು ಎಗರಿಸಿದ್ದಾರೆ. ಅಂದಾಜು ಮೂರು ಲಕ್ಷ ಮೌಲ್ಯದ ಚಿನ್ನ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಮದುವೆ ವೇಳೆ ವರನ ಕಡೆಯವರು ನೀಡಿದ್ದ ಚಿನ್ನದಲ್ಲಿ ನೆಕ್ಲೆಸ್ ಮತ್ತು ಓಲೆಗಳನ್ನು ವಧುವಿನ ಕೊಠಡಿಯಲ್ಲಿ ಇರಿಸಿ ರೂಮಿನ ಲಾಕ್ ಮಾಡಿ ಎಲ್ಲರು ಮುಹೂರ್ತ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ವಧುವಿನ ಕೊಠಡಿಯ ಕಿಟಕಿ(ಸ್ಲೈಡಿಂಗ್ ಗ್ಲಾಸ್ ಕಿಟಕಿ)ಯಿಂದ ಒಳಬಂದಿರುವ ಕಳ್ಳರು ರೂಮನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಚಿನ್ನವನ್ನು ಎಗರಿಸಿ ಕಿಟಕಿಯಿಂದಲೇ ಪರಾರಿಯಾಗಿದ್ದಾರೆ.
ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಮುಹೂರ್ತದ ವೇಳೆ ವಧುವಿನ ಕಡೆಯವರು ಕೊಠಡಿಗೆ ಹೋಗಲು ಮುಂದಾದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ವಿವಾಹ ಸಂದರ್ಭದಲ್ಲಿ ತೀವ್ರ ಗೊಂದಲ ಉಂಟಾಗಿದೆ. ತಕ್ಷಣ ಕಟ್ಟಡ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಳ್ಳರು ಕಿಟಕಿ ಮೂಲಕ ಒಳಬಂದಿರುವುದು ಬೆಳಕಿಗೆ ಬಂದಿದೆ. ಶಾಲಿಮಾರ್ ಹಾಲ್ ಪಕ್ಕದಲ್ಲಿ ಕಟ್ಟಡವೊಂದನ್ನು ಕಟ್ಟುತ್ತಿದ್ದು, ಅದರ ಮೇಲಿನಿಂದ ಹತ್ತಿ ಖದೀಮರು ವಧುವಿನ ಕೊಠಡಿ ಕಿಟಕಿ ಮೂಲಕ ಒಳನುಸುಳಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವಿಷಯ ತಿಳಿದ ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಕಟ್ಟಡದ ಸಿಸಿ ಕ್ಯಾಮರದಲ್ಲಿ ಇಬ್ಬರು ವ್ಯಕ್ತಿಗಳ ಚಹರೆ ಪತ್ತೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ
ವಧುವಿನ ಕೊಠಡಿಗೆ ಸರಳುಗಳಿಲ್ಲದ ಮಾಮೂಲಿ ಕಿಟಕಿ ಇರಿಸಿರುವ ಬಗ್ಗೆ ಕಟ್ಟಡ ಮಾಲೀಕರ ವಿರುದ್ಧ ವಧುವರರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯದ ಬಗ್ಗೆ ಕಟ್ಟಡ ಮಾಲೀಕರು ವಿಷಾದ ವ್ಯಕ್ತಪಡಿಸಿದ್ದು, ಚಿನ್ನ ಪತ್ತೆಯಾಗದಿದ್ದಲ್ಲಿ ನಿರ್ಲಕ್ಷ್ಯದ ನೈತಿಕ ಹೊಣೆ ಹೊತ್ತು ಆಗಿರುವ ನಷ್ಟಭರಿಸಿಕೊಡುವುದಾಗಿ ವಧುವರರ ಕಡೆಯವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.













