ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೀನ್ಸ್ ದರ ನಿಗದಿಯಲ್ಲಿ ವರ್ತಕರಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನಗರದ ಎಪಿಎಂಸಿ ಪ್ರಾಂಗಣದಲ್ಲಿ ರೈತರು ತರಕಾರಿ ಸಾಗಣೆ ತಡೆದು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ನಟೇಶ್ ಮತ್ತು ತಹಶೀಲ್ದಾರ್ ರೇಷ್ಮಾಶೆಟ್ಟಿ ರೈತರ ಸಮಸ್ಯೆ ಆಲಿಸಲು ಪ್ರಯತ್ನಿಸಿದರು. ಆದರೆ, ವರ್ತಕರನ್ನು ಕರೆಸಿ ದರ ನಿಗದಿ ಮಾಡುವಲ್ಲಿ ವಿಫಲರಾದರು. ಇದನ್ನು ಖಂಡಿಸಿ ಎಪಿಎಂಸಿ ಗೇಟ್ ಹಾಕಿದ ರೈತರು, ಸಂಚಾರ ಬಂದ್ ಮಾಡಲು ಯತ್ನಿಸಿದರು. ರೈತರನ್ನು ಚದುರಿಸಿದ ಪೊಲೀಸರು, ತರಕಾರಿ ವಾಹನಗಳನ್ನು ಕಳುಹಿಸಿದರು.

ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ಗೆ ಕೆಜಿಗೆ ₹80 ರಿಂದ ₹90 ದರ ಇದ್ದರೂ, ಚಿಕ್ಕಮಗಳೂರಿನಲ್ಲಿ ವರ್ತಕರು ₹30 ರಿಂದ ₹40 ಮಾತ್ರ ಹರಾಜು ಕೂಗುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಇದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು. ಎಪಿಎಂಸಿ ಗೇಟ್ ಬಂದ್ ಮಾಡಿ ಸ್ಥಳಕ್ಕೆ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು. ಅಲ್ಲದೇ ಸೂಕ್ತ ದರ ನಿಗದಿ ಮಾಡಿ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಬೇಕು ಎಂದು ಮನವಿ ಮಾಡಿದರು.














