ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಬಾಳೆಹೊನ್ನೂರಿನಲ್ಲಿ ಭೀತಿ ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅವರ ಮನೆ ಮುಂದೆಯೇ ವಾಮಾಚಾರ ಮಾಡಲಾಗಿದೆ.
ಎಸಿಎಫ್ ಮೋಹನ್ ಮತ್ತು ಅವರ ಜೀಪ್ ಚಾಲಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದ್ದು, ಅರಣ್ಯ ಇಲಾಖೆಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಎಸಿಎಫ್ ಮೋಹನ್ ಅವರ ಮನೆಯ ಗೇಟ್ ಬಳಿ ಅನಾಮಧೇಯ ವ್ಯಕ್ತಿಗಳು ವಾಮಾಚಾರ ನಡೆಸಿದ್ದಾರೆ. ಅಧಿಕಾರಿ ಮೋಹನ್ ಹಾಗೂ ಅವರ ಜೀಪ್ ಚಾಲಕನ ಫೋಟೋಗಳನ್ನು ಮಣ್ಣಿನ ಮಡಕೆಯೊಳಗೆ ಇಟ್ಟು, ಅರಿಶಿನ-ಕುಂಕುಮ ಎರಚಿ ಮಡಕೆಯನ್ನು ಒಡೆದು ಹಾಕಲಾಗಿದೆ. ಬೆಳಿಗ್ಗೆ ಅಧಿಕಾರಿಗಳು ಮನೆ ಹೊರಬಂದಾಗ ಈ ದೃಶ್ಯ ಕಂಡುಬಂದಿದ್ದು, ಇಡೀ ಕುಟುಂಬ ಆತಂಕಕ್ಕೊಳಗಾಗಿದೆ.

ಈ ವಾಮಾಚಾರದ ಹಿಂದೆ ಕಚೇರಿಯ ಸಿಬ್ಬಂದಿಯೇ ಇರುವ ಸಾಧ್ಯತೆಯಿದೆ ಎಂದು ಎಸಿಎಫ್ ಮೋಹನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇಲಾಖೆಯೊಳಗಿನ ವೈಷಮ್ಯ ಅಥವಾ ವರ್ಗಾವಣೆ ವಿಚಾರವಾಗಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಎಸಿಎಫ್ ನೀಡಿದ ದೂರಿನನ್ವಯ ಬಾಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಮಾಚಾರ ಮಾಡಿದ ಕಿಡಿಗೇಡಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.















