
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ನಿಯಮಬಾಹಿರವಾಗಿ ತಿದ್ದುಪಡಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಪಟ್ಟಣದ 7ನೇ ವಾರ್ಡಿನಲ್ಲಿರುವ ಅ.ನಂ. 7762/4081ರ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಪಟ್ಟಣ ನಿವಾಸಿ ಕೆ.ಇ. ಹಿರಿಯಣ್ಣ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರು ಪರಿಶೀಲನೆಯ ನಂತರ ಕ್ರಮ ಕೈಗೊಳ್ಳಲಾಗಿದೆ.

ಅಮಾನತುಗೊಂಡವರು ಪುರಸಭೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಕಂದಾಯ ನಿರೀಕ್ಷಕ ಜಗದೀಶ್ ರಾಜ್ ಅರಸ್ ಮತ್ತು ಖಾತೆ ಶಾಖೆಯ ವಿಷಯ ನಿರ್ವಾಹಕ ಸಿ.ಎಸ್. ಶಂಕರ್. ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ ನಗರ ಸಂಸ್ಥೆಗಳಲ್ಲಿ ಕೈಬರಹದ ಅರ್ಜಿಗಳನ್ನು ಭೌತಿಕವಾಗಿ ಸ್ವೀಕರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಈ ಇಬ್ಬರು ಸಿಬ್ಬಂದಿಗಳು ಕೈಬರಹದ ಅರ್ಜಿಯನ್ನು ಸ್ವೀಕರಿಸಿ ಭೌತಿಕ ಕಡತದಲ್ಲಿ ಪ್ರಕರಣವನ್ನು ನಿರ್ವಹಿಸಿರುವುದು ಸುತ್ತೋಲೆ ಉಲ್ಲಂಘನೆಯಾಗಿದೆ.
ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇಟ್ಟುಕೊಂಡು ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.













