ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕ್ಷುಲ್ಲಕ ಕಾರಣಕ್ಕಾಗಿ ರೈಲ್ವೆ ಇಲಾಖೆ ನೌಕರನ ಮೇಲೆ ಹಲ್ಲೆ ನಡೆಸಿದ ಐವರ ವಿರುದ್ಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸದುರ್ಗ ತಾಲ್ಲೂಕಿನ ಎಂ.ಜಿ ದಿಬ್ಬದ ನಿವಾಸಿಯಾದ ರೈಲ್ವೆ ಇಲಾಖೆ ನೌಕರ ಯತೀಶ್ ಕುಮಾರ್ ಮತ್ತು ಅವರ ತಮ್ಮ ಮೋಹನ್ ಹಲ್ಲೆಗೊಳಗಾದವರು.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಹಬ್ಬಕ್ಕೆಂದು ಯತೀಶ್ ಕುಮಾರ್ ಮತ್ತು ಮೋಹನ್ ಇಬ್ಬರೂ ಮಂಗಳವಾರ ಕಡೂರು ತಾಲ್ಲೂಕಿನ ಚೌಳಹಿರಿಯೂರಿನ ತಂಗಿಯ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪೆಟ್ರೋಲ್ ಬಂಕಿನ ಬಳಿ ಪರಿಚಿತನಾದ ಪುಟ್ಟರಾಜು ಅವರನ್ನು ಮಾತನಾಡಿಸಲು ಬೈಕ್ ನಿಲ್ಲಿಸಿದ್ದಾಗ, ಚೌಳಹಿರಿಯೂರಿನ ಯತೀಶ್ ಎಂಬಾತ ಹಿಂದಿನಿಂದ ಬೈಕಿಗೆ ಗುದ್ದಿಸಿದ್ದು, ಆ ಸಂದರ್ಭ ಮಾತಿಗೆ ಮಾತು ಬೆಳೆದು ಯತೀಶ್ ಪುಟ್ಟರಾಜು ಅವರಿಗೆ ಅವಾಚ್ಯವಾಗಿ ಬಯ್ದಿದ್ದಾನೆ. ತಡೆಯಲು ಹೋದ ಯತೀಶ್ ಕುಮಾರ್ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಯತೀಶ್ಗೆ ಅದೇ ಊರಿನ ಕೆಲ ಸ್ನೇಹಿತರೂ ಜೊತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಯಗೊಂಡ ಯತೀಶ್ ಕುಮಾರ್ ಅವರು ಯಗಟಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಹಲ್ಲೆ ಮಾಡಿದ ಯತೀಶ್, ಮಲ್ಲೇಶ್, ರಘು, ಸ್ವಾಮಿ ಮತ್ತು ಮೆಡಿಕಲ್ ಶಾಪ್ ಮಾಲೀಕನ ವಿರುದ್ಧ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.













