
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕೆಳ್ಳಹಳ್ಳಿ ಗ್ರಾಮದಲ್ಲಿ 2019ರಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆಯನ್ನು ಇದುವರೆಗೆ ಮರು ನಿರ್ಮಾಣ ಮಾಡಿಲ್ಲ ಇದರಿಂದ ಗ್ರಾಮಸ್ಥರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ.. ಏನಿದೆ ಇದರಲ್ಲಿ..?; ಅಲ್ಪಸಂಖ್ಯಾತರ ಕಲ್ಯಾಣ: ಹೆಚ್ಚಿನ ಘೋಷಣೆಗಳು – ಇಲ್ಲಿ ಹೈಲೈಟ್ಸ್

ಬಾಳುರಿನಿಂದ ಬಣಕಲ್, ಗುಡ್ಡಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆಳ್ಳಹಳ್ಳಿ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡಿತ್ತು. ಸುಮಾರು 30 ಕುಟುಂಬಗಳಿರುವ ಕೆಳ್ಳಹಳ್ಳಿ ಗ್ರಾಮಸ್ಥರ ಜಮೀನು ಸೇತುವೆಯ ಇನ್ನೊಂದು ಭಾಗದಲ್ಲಿದ್ದು ನಿತ್ಯವೂ ಭತ್ತದ ಗದ್ದೆ, ಕಾಫಿ ತೋಟಗಳಿಗೆ ತೆರಳಲು ರೈತರಿಗೆ ಸಮಸ್ಯೆಯಾಗಿದೆ.


ಮೂರು ಕಿಲೋಮೀಟರ್ ದೂರದ ಜಮೀನಿನಿಂದ ಬೆಳೆದ ಫಸಲನ್ನು ಸಾಗಿಸಲಾಗದೆ 25 ಕಿ.ಮೀ ಸುತ್ತಿ ಬಣಕಲ್ ಪಟ್ಟಣದ ಮೂಲಕ ಹಾದು ಬರುವಂತಾಗಿದೆ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರು ಸ್ಪಂದನೆ ಸಿಕ್ಕಿಲ್ಲ. ಸೇತುವೆ ಇಲ್ಲದ ಕಾರಣ ಜಮೀನುಗಳಿಗೆ ವಾಹನಗಳು ಹೋಗಲಾಗದೆ ಕೂಲಿಗೆ ಕಾರ್ಮಿಕರು ಬರುತ್ತಿಲ್ಲ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2025-26: SC/ST ಸಮುದಾಯಗಳಿಗೆ ಸಿದ್ದರಾಮಯ್ಯ ಗಿಫ್ಟ್
ಜಮೀನನ್ನು ನಿರ್ವಹಣೆ ಮಾಡುವುದೇ ದುಸ್ತರವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಹೇಮಾವತಿಯ ಉಪನದಿ ಕೆಳಹಳ್ಳಿ ಹಳ್ಳಕ್ಕೆ ಈ ಸೇತುವೆ ನಿರ್ಮಿಸಲಾಗಿದ್ದು, ರೈತರ ಜಮೀನಿಗೆ ಅನುಕೂಲವಾಗುತ್ತಿತ್ತು. ಐದಾರು ಕಿಲೋಮೀಟರ್ ಚಲಿಸಿದ್ರೆ ಸಾಕು ಬಣಕಲ್ ಪಟ್ಟಣವನ್ನು ತಲುಪಬಹುದಿತ್ತು.
ಆರು ವರ್ಷಗಳ ಹಿಂದೆ ಮಳೆಗೆ ಹಾನಿಯಾದ ಸೇತುವೆಯನ್ನು ಇದುವರೆಗೂ ನಿರ್ಮಿಸಿಲ್ಲ. ಹಲವು ಬಾರಿ ಲೋಕಪಯೋಗಿ ಇಲಾಖೆಗೆ ಮನವಿ ನೀಡಿದಾಗ ಟೆಂಡರ್ ಆಗಿದೆ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇಂಜಿನಿಯರ್ ಖುದ್ದಾಗಿ ಬಂದು ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ.

ಇದನ್ನೂ ಓದಿ: ಸೌರ ಪಂಪ್ ಯೋಜನೆಗೆ 1 ಲಕ್ಷ ಸಹಾಯಧನ; ಸಂಪೂರ್ಣ ಮಾಹಿತಿ ಇಲ್ಲಿದೆ
ಸೇತುವೆ ಇಲ್ಲದೆ ಇರುವುದರಿಂದ ಭತ್ತ ಬೆಳೆಯುವುದನ್ನೇ ರೈತರು ಕೈಬಿಟ್ಟಿದ್ದಾರೆ. ಬಣಕಲ್ ನ ಕಡೆ ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೊಟ್ಟಿಗೆಹಾರದ ಮೂಲಕ ಸಂಚರಿಸುವಂತಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿ ಸೇತುವೆ ನಿರ್ಮಿಸಿ ಕೊಡಬೇಕೆಂದು ಕೆಳ್ಳಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)













