ಕಳಸ: (ನ್ಯೂಸ್ ಮಲ್ನಾಡ್ ವರದಿ) ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ. ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರು ಆರೋಪ ಎದುರಿಸುತ್ತಿದ್ದಾನೆ.
ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್ಎಫ್ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿದೆ. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಮಾಡಿದ್ದಾನೆ.


ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ದರ್ಶನ್ ವಿರುದ್ಧ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ. ಹೀಗಾಗಿ ದರ್ಶನ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ. ಆಲ್ದೂರು ವಲಯ ಅರಣ್ಯಾಧಿಕಾರಿಗೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರಿಂದ ದೂರು ದಾಖಲಾಗಿದೆ.

ಕಾನೂನು ಎಲ್ಲರಿಗೂ ಒಂದೇ. ಸಂತೋಷ್, ಮಾರ್ಕಂಡೇಯ ದೇವಸ್ಥಾನದ ಅರ್ಚಕರು ಸೇರಿದಂತೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯವರು ಆರ್ಎಫ್ಒ ದರ್ಶನ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರ ಸುಪ್ರೀತ್ ತಿಳಿಸಿದ್ದಾರೆ.
ಖಾಂಡ್ಯದ ಇಬ್ಬರು ಅರ್ಚಕರಿಗೆ 14 ದಿನ ನ್ಯಾಯಂಗ ಬಂಧನ
ಹುಲಿ ಉಗುರು ಧರಿಸಿದ್ದ ಇಬ್ಬರು ಅರ್ಚಕರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಚಿಕ್ಕಮಗಳೂರು ಜಿಲ್ಲಾ ಕೋರ್ಟ್ ಆದೇಶ ಹೊರಡಿಸಿದೆ.
ಹುಲಿ ಉಗುರು ಇರುವು ಪೆಂಡೆಂಟ್ ಧರಿಸಿದ ಆರೋಪದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಖಾಂಡ್ಯದ ಮಾರ್ಕಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು ಬಂಧಿಸಲಾಗಿತ್ತು, ಇದೀಗ ಈ ಇಬ್ಬರು ಅರ್ಚಕರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೂರು ಹುಲಿ ಉಗುರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.













