ಈಶ್ವರ ಖಂಡ್ರೆ ಅವರು ಕುದುರೆಮುಖ ಸೇರಿದಂತೆ ರಾಜ್ಯದ ಅರಣ್ಯದೊಳಗಿರುವ ವಸತಿ ಪ್ರದೇಶಗಳ ಸ್ಥಳಾಂತರಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದ್ದಾರೆ.
Kudremukh National Park ಅರಣ್ಯ ಪ್ರದೇಶದಿಂದ ಸ್ವಯಂ ಪ್ರೇರಿತರಾಗಿ ಹೊರಬರಲು ಅರ್ಜಿ ಸಲ್ಲಿಸಿದ್ದ ಐದು ಕುಟುಂಬಗಳಿಗೆ 2.38 ಕೋಟಿ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಸಚಿವರು, ಕಾಡಾನೆ ದಾಳಿಗಳಂತಹ ಘಟನೆಗಳಿಗೆ ಕೇವಲ ಪುಂಡಾನೆಯನ್ನು ಸೆರೆ ಹಿಡಿಯುವುದೇ ಶಾಶ್ವತ ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಇಬ್ಬರ ಮೇಲೆ ಕಾಡಾನೆ ದಾಳಿ ನಡೆದ ಹಿನ್ನೆಲೆ, ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿತ್ತು. ಆದರೆ ಅರಣ್ಯದೊಳಗಿನ ಮಾನವ ವಸತಿ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಗ್ಗಿಸಲು ಜನರ ಸ್ಥಳಾಂತರವೇ ದೀರ್ಘಕಾಲಿಕ ಪರಿಹಾರ ಎಂದು ಖಂಡ್ರೆ ಅಭಿಪ್ರಾಯಪಟ್ಟರು.


ಅರಣ್ಯ ಪ್ರದೇಶ ವಿಸ್ತರಣೆ ಹಾಗೂ ಸಂರಕ್ಷಣೆಯ ಉದ್ದೇಶದಿಂದ ಸರ್ಕಾರ ಪುನರ್ವಸತಿ ಯೋಜನೆ ಜಾರಿಗೆ ತರುತ್ತಿದೆ. ಕುದುರೆಮುಖ ಅರಣ್ಯದೊಳಗೆ ಮೊದಲು ಸುಮಾರು 1300 ಕುಟುಂಬಗಳು ವಾಸಿಸುತ್ತಿದ್ದವು. ಇದರಲ್ಲಿ ಈಗಾಗಲೇ 350 ಕುಟುಂಬಗಳಿಗೆ ಪರಿಹಾರ ನೀಡಿ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇನ್ನೂ 300 ಕುಟುಂಬಗಳು ಸ್ವಯಂ ಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ಪುನರ್ವಸತಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸ್ವಾಗತ:
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶದಿಂದ ಸ್ವಯಂ ಪ್ರೇರಿತವಾಗಿ ಸ್ಥಳಾಂತರಗೊಳ್ಳಲು ಮುಂದಾದ 5 ಕುಟುಂಬಗಳಿಗೆ ರೂ 2.38 ಕೋಟಿ ಪರಿಹಾರ ನೀಡಿದ್ದು, ಇದನ್ನು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸ್ವಾಗತಿಸಿದ್ದು, ಅದಕ್ಕಾಗಿ ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಮತ್ತು ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ಡಿ. ರಾಜೇಗೌಡರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
ಹಾಗೆಯೇ ಹಲವು ವರ್ಷಗಳಿಂದ ಇದಕ್ಕಾಗಿ ಶ್ರಮ ವಹಿಸಿದ ಸ್ಥಳೀಯ ಹೋರಾಟ ಸಮಿತಿಯವರು ಹಾಗೂ ಕುಟುಂಬಸ್ಥರಿಗೂ ಅಭಿನಂದನೆಗಳು.
ಈ ಪರಿಹಾರ ಶೀಘ್ರ ಗತಿಯಲ್ಲಿ ದೊರಕಲು ಒಂದು ಪ್ರಮುಖ ಕಾರಣ ಕೆರೆಕಟ್ಟೆಯಲ್ಲಿ ಆನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿರುವುದು ಎಂಬುದು ಸಹ ಕಹಿ ಸತ್ಯ ಎಂದಿದೆ.













