ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಹರಡುತ್ತಿರುವ ಹಳದಿ ಎಲೆಚುಕ್ಕಿ ರೋಗವು ರೈತರಲ್ಲಿ ಆತಂಕ ಮೂಡಿಸಿದೆ. ಹಲವು ವರ್ಷಗಳಿಂದ ಈ ರೋಗದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ “ಬಯೋಶಮನ” ಎಂಬ ಜೈವಿಕ ಔಷಧಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೈಟೆಕ್ ದೋಟಿ ಹಾಗೂ ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಕಳೆದ ಆರು ವರ್ಷಗಳಿಂದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳ ಸಹಕಾರದಲ್ಲಿ ಸಂಶೋಧನೆ ನಡೆಸಿ ಈ ಉತ್ಪನ್ನವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ತಮ್ಮ ತೋಟ ಸೇರಿದಂತೆ ನೂರಾರು ರೈತರ ತೋಟಗಳಲ್ಲಿ ನಡೆಸಿದ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಅವರು ದಾವೆ ಮಾಡಿದ್ದಾರೆ.

ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ನಡೆದ ಪ್ರಯೋಗದಲ್ಲಿ ಕೊಳೆರೋಗ ಮೂರು ತಿಂಗಳವರೆಗೆ ನಿಯಂತ್ರಣದಲ್ಲಿದ್ದು, ಎಲೆಚುಕ್ಕಿ ರೋಗ ಒಂದು ವರ್ಷದವರೆಗೆ ಮರುಕಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಔಷಧಿಯನ್ನು ಕಾಫಿ, ಕಾಳುಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಲ್ಲಿಯೂ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.——————————————-














