
ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಾಫಿ ಕೊಯ್ಲು ಹಿನ್ನಲೆ ತೋಟಕ್ಕೆ ತೆರಳಿದ್ದ ರೈತರೊಬ್ಬರ ಮೇಲೆ ಕಾಡುಕೋಣ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ಕಳಸ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಲಲಿತಾದ್ರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾಫಿ ತೋಟದಲ್ಲಿದ್ದ ರೈತರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಪರಿಣಾಮ ಸ್ಥಳದಲ್ಲೇ ರೈತ ರಘುಪತಿ (73) ಸಾವನ್ನಪ್ಪಿದ್ದಾರೆ. ಈ ಕುರಿತು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡುಪ್ರಾಣಿಗಳ ಹಾವಳಿ

ಇತ್ತೀಚಿನ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಾದ ಎನ್ ಆರ್ ಪುರ, ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ ಭಾಗಗಳಲ್ಲಿ ಕಾಡಾನೆ, ಚಿರತೆ, ಕಾಡುಕೋಣ ದಾಳಿಗಳು ನಡೆದ ವರದಿಯಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕಾಡುಕೋಣ ಹಾಗೂ ಆನೆ ದಾಳಿಯಿಂದ ಹತ್ತಾರು ಕಾರ್ಮಿಕರ, ರೈತರ ಜೀವಗಳು ಹೋಗಿವೆ. ಆದರೆ ಅರಣ್ಯ ಇಲಾಖೆ ಮಾತ್ರ ಈ ಕುರಿತು ಗಮನಹರಿಸುತ್ತಿಲ್ಲ ಎನ್ನುವುದು ರೈತರ ಆರೋಪ. ಒಟ್ಟಿನಲ್ಲಿ ಅರಣ್ಯ ಇಲಾಖೆ ಸರ್ಕಾರದ ಮಟ್ಟದಲ್ಲಿ ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಇನ್ನಷ್ಟು ಜನ ರೈತರ ಪ್ರಾಣಕ್ಕೆ ಅಪಾಯ ಇರೋದಂತು ಸುಳ್ಳಲ್ಲ.













