
ಶೃಂಗೇರಿ ತೋಟಗಾರಿಕೆ ಇಲಾಖೆ ವತಿಯಿಂದ ಹೆಚ್ಚುತ್ತಿರುವ ಉಷ್ಣತೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಹಿರಿಯ ತೋಟಗಾರಿಕೆ ಇಲಾಖೆ ನಿರ್ದೇಶಕ ಕೃಷ್ಣ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಹೆಚ್ಚಾದ ಉಷ್ಣತೆಯಿಂದ ಒಣಗಿ ನಿಂತಿರುವ ಕಳೆ ಗಿಡಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅರಣ್ಯ ನಾಶವಾಗಿದೆ. ಅಲ್ಲದೆ ಹಲವು ತೋಟಗಳು ಕೂಡ ನಾಶವಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ವ್ಯಾಪ್ತಿಯ ಹಾಲಂದೂರು ಸಮೀಪ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 2 ಎಕರೆ ಅಡಿಕೆ ಹಾಗೂ ಬಾಳೆ ಗಿಡ ನಾಶವಾಗಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣತೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಏನಿದೆ ಕ್ರಮ:
* ತೋಟಗಳಲ್ಲಿ ಬೆಳೆದು, ಒಣಗಿ ನಿಂತಿರುವ ಕಳೆ ಗಿಡಗಳನ್ನು ತಗೆಯುವುದು. ತೋಟದ ಸುತ್ತಲೂ 3 ಮೀಟರ್ ಅಂತರದಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆಗೆದು ಸುರಕ್ಷಿತ ವಲಯವನ್ನಾಗಿ ಮಾಡುವುದು.
* ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರುಣಿಸುವುದು, ಅಂದರೆ ಮಣ್ಣಿನಲ್ಲಿರುವ ತೇವಾಂಶ ಕಡಿಮೆಯಾಗದಂತೆ ನಿಗದಿತ ಪ್ರಮಾಣದಲ್ಲಿ ನಿರಂತರವಾಗಿ ನೀರನ್ನು ಒದಗಿಸಬೇಕು.
* ಅಡಿಕೆ, ಕಾಳುಮೆಣಸು ಮತ್ತು ಇತರೆ ಬೆಳೆಗಳಿಗೆ ಹನಿ/ತುಂತುರು ನೀರಾವರಿಯಲ್ಲಿ ನೀರು ಒದಗಿಸುವುದು ಮತ್ತು ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವುದು.
* ತೋಟಗಳಲ್ಲಿ 5 ರಿಂದ 7 ಸೆಂ. ಮೀ ದಪ್ಪದ ಸಾವಯವ ತ್ಯಾಜ್ಯ/ ಒಣಗಿದ ಅಡಿಕೆ ಗರಿಗಳು/ ಇತರೆ ಸಾವಯವ ಪದಾರ್ಥಗಳ ಹೊದಿಕೆ ಮಾಡುವುದರಿಂದ ಮಣ್ಣಿನಲ್ಲಿರುವ ನೀರು ಆವಿಯಾಗುವುದನ್ನು ತಡೆಗಟ್ಟಬಹುದು.
* ಮಣ್ಣು ಪರೀಕ್ಷೆ ಮಾಡಿಸಿ, ಶಿಪಾರಸ್ಸು ಮಾಡಿದ ಗೊಬ್ಬರವನ್ನು ಕಾಲಕಾಲಕ್ಕೆ ನೀಡುವುದು.
* ಜೀವಾಣು ಗೊಬ್ಬರಗಳಾದ AMC, ಟ್ರೈಕೋಡರ್ಮ ಮತ್ತು ಸುಡಮೋನಸ್ ಗೊಬ್ಬರವನ್ನು ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ಅಡಿಕೆ, ಕಾಳುಮೆಣಸು, ಜಾಯಿಕಾಯಿ, ಲವಂಗ ಇತರೆ ಬೆಳೆಗಳಿಗೆ ನೀಡುವುದು.
* ತೋಟದ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎತ್ತರವಾದ ಮರಗಳನ್ನು ಬೆಳಸಿ ನೆರಳಿರುವಂತೆ ಮಾಡುವುದು.
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ತರಬೇತಿಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅಡಿಕೆ:
ಅಡಿಕೆ ಎಲೆಚುಕ್ಕೆ ರೋಗ ಮತ್ತು ಹಿಂಗಾರು ಒಣಗುವಿಕೆಯನ್ನು ತಡೆಗಟ್ಟಲು ಕಾರ್ಬೆಂಡೈಜಿಮ್ + ಮ್ಯಾಂಕೋಜೆಬ್ (ಸಾಫ್) 2 ಗ್ರಾಂ, 1 ಲೀ ನೀರು ಅಥವಾ ಕಾಪರ್ ಆಕ್ಸಿಕ್ಲೋರೈಡ್ 2.5 ಗ್ರಾಂ, 1 ಲೀ ನೀರಿಗೆ ಅಥವಾ ಪ್ರೋಪಿಕೊನಜೋಲ್ 25% EC, 1 ಮಿಲಿ, 1ಲೀ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಹಿಂಗಾರ ಮತ್ತು ಎಲೆಗಳು ನೆನೆಯುವಂತೆ ಸಿಂಪಡಿಸುವುದು. ಪ್ರೋಪಿಕೊನಜೋಲ್ ಔಷಧಿ ಶೃಂಗೇರಿ ತೋಟಗಾರಿಕೆ ಕಛೇರಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ವಿಶ್ವದ ಮೊದಲ CNG ಸ್ಕೂಟರ್ ಬಿಡುಗಡೆಗೆ ಸಿದ್ದ; ಮೈಲೇಜ್ ಕೇಳಿ ಶಾಕ್ ಆದ ಜನ…
ಕಾಳುಮೆಣಸು:
* ಅತಿಯಾದ ರೋಗ ಪೀಡಿತ ಬಳ್ಳಿಗಳನ್ನು ಗುರುತಿಸಿ, ಕಿತ್ತು, ತೋಟದಿಂದ ದೂರ ಸಾಗಿಸಿ ಸುಡಬೇಕು. 5ಗ್ರಾಂ ಪೆಪ್ಪರ್ ಸ್ಪೆಷಲ್ ನ ಜೊತೆಗೆ 5ಗ್ರಾಂ 19:19:19 ಗೊಬ್ಬರವನ್ನು 1 ಲೀ ನೀರಿನಲ್ಲಿ ಬೆರಸಿ ಚೆನ್ನಾಗಿ ಬಳ್ಳಿಗಳು ನೆನೆಯುವಂತೆ ಸಿಂಪಡಣೆ ಮಾಡಬೇಕು.
* ಕಾಳುಮೆಣಸು ಸೊರಗು ರೋಗ ಬಂದರೆ ಕಾಪರ್ ಆಕ್ಸಿಕ್ಲೋರೈಡ್ 2.5 ಗ್ರಾಂ, 1 ಲೀ ನೀರಿಗೆ ಬೆರಸಿ ಸಿಂಪಡಿಸುವುದು. ಕೀಟ ಭಾದೆಗಳು ಕಂಡುಬಂದರೆ ಕ್ಲೋರೋ ಪೈರಿಪಾಸ್ 2.5 ಮಿ. ಲೀ, 1 ಲೀ ನೀರು ಅಥವಾ ಇಮಿಡೋಕ್ಲೋಪ್ರಿಡ್ 0.25 ಮಿ.ಲೀ ನೀರಿಗೆ ಸೇರಿಸಿ ಚೆನ್ನಾಗಿ ಬಳ್ಳಿಗಳು ನೆನೆಯುವಂತೆ ಸಿಂಪಡಿಸುವಂತೆ ಶೃಂಗೇರಿ ಹಿರಿಯ ತೋಟಗಾರಿಕೆ ಇಲಾಖೆ ನಿರ್ದೇಶಕ ಕೃಷ್ಣ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಗಮನಕ್ಕೆ!; ಸರ್ಕಾರದಿಂದ ಮಹತ್ವದ ಸುದ್ದಿ













