
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಮಳೆ ಮಾಪನ ಯಂತ್ರ ದುರಸ್ಥಿ ಮತ್ತು ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಗೆ ಕ್ಷೇತ್ರ ಶಾಸಕರಲ್ಲಿ ಮತ್ತು ತಹಸೀಲ್ದಾರ್ ಅವರಲ್ಲಿ ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಅಸಗೋಡು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆಧಾರ್ & ರೇಷನ್ ಕಾರ್ಡ್ ಇದ್ರೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಿ

ಅಸಗೋಡು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಮಳೆ ಮಾಪನ ಅಳವಡಿಸಲಾಗಿದ್ದು, 2023-24ನೇ ಸಾಲಿನಿಂದಲೂ (ಎರಡೂವರೆ ವರ್ಷಗಳಿಂದ) ಈ ಮಾಪನ ಹಾಳಾಗಿದೆ. ಅನೇಕ ಬಾರಿ ಗ್ರಾಮ ಪಂಚಾಯತಿ ಮತ್ತು ಇಲಾಖೆಗಳ ಗಮನಕ್ಕೆ ತಂದಿದ್ದರೂ, ಇದುವರೆಗೆ ಯಾವುದೇ ದುರಸ್ಥಿ ಕಾರ್ಯ ಕೈಗೊಂಡಿಲ್ಲ.

ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರ ಕೆಟ್ಟು ಹೋಗಿದ್ದರೂ ದುರಸ್ಥಿ ಮಾಡದೆ, ಕಳೆದ ಎರಡು ವರ್ಷಗಳಿಂದ ರೈತರಿಗೆ ಹವಾಮಾನ ಆಧಾರಿತ ವಿಮಾ ಪರಿಹಾರವನ್ನು ಅವೈಜ್ಞಾನಿಕ ಮಾನದಂಡ ಬಳಸಿ ಘೋಷಣೆ ಮಾಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರತಿವರ್ಷವೂ ವಿಮಾ ಮಾನದಂಡದ ಟರ್ಮ್ಶೀಟ್ನಲ್ಲಿ ಉಲ್ಲೇಖಿಸಿದ ಗರಿಷ್ಠ ಮಿತಿಗಿಂತಲೂ ಹೆಚ್ಚು ಮಳೆಯಾಗಿದ್ದು, ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ರೈತರು ತಮ್ಮ ನಿವಾಸಗಳಲ್ಲಿ ಅಳೆದಿರುವ ಮಳೆ ಮಾಪನದಿಂದ ದೃಢಪಟ್ಟಿರುತ್ತದೆ
ಮಳೆಮಾಪನವು ದುರಸ್ಥಿಯಾಗದಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಮತ್ತು ದುರಸ್ಥಿ ಕ್ರಮ ಕೈಗೊಳ್ಳುವಂತೆ ಕೋರಿದ್ದರೂ ಸಹ ಕಂದಾಯ ಆಥವಾ ಸಂಬಂಧಿಸಿದ ಇತರ ಇಲಾಖೆಗಳ ಅಧಿಕಾರಿಗಳು ಪರಿಶೀಲನೆಗೂ ಬಾರದೇ, ಸೂಕ್ತ ದುರಸ್ಥಿ ಕ್ರಮವನ್ನೂ ಕೈಗೊಳ್ಳದೇ ಇರುವುದು ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯನ್ನು ತೋರಿಸುತ್ತದೆ.
ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ವಿಮಾ ಪರಿಹಾರಕ್ಕೆ ಅತ್ಯಂತ ಕಡಿಮೆ ಮಳೆ ಬಿದ್ದಿರುವ ಸಂಬಂಧವಿಲ್ಲದ ಮತ್ತು ಹತ್ತಿರದ ಗ್ರಾಮಗಳ ದಾಖಲೆಗಳನ್ನು ಪರಿಗಣಿಸದೇ, ಇನ್ಯಾವುದೋ ಗ್ರಾಮದ ಕಡಿಮೆ ಮಳೆ ದಾಖಲೆ ಮಾಹಿತಿಯನ್ನು ಪಡೆದು, ಅದನ್ನು ಅತ್ಯಂತ ಹೆಚ್ಚು ಮಳೆ ಬಿದ್ದ ಅಸಗೋಡು ಗ್ರಾಮಕ್ಕೆ ಸಂಯೋಜಿಸಿ, ಅವೈಜ್ಞಾನಿಕವಾಗಿ ಅತ್ಯಂತ ಕಡಿಮೆ ಮೊತ್ತದ ಬೆಳೆ ವಿಮೆ ಪರಿಹಾರಗಳನ್ನು ಘೋಷಿಸಲಾಗುತ್ತಿದೆ.
ಇದನ್ನೂ ಓದಿ: ವಿದ್ಯಾಸಿರಿ ಸೇರಿ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ
ಇದರಿಂದ ಇಲ್ಲಿನ ರೈತ ಸಮೂಹಕ್ಕೆ ಅತ್ಯಂತ ಘೋರ ಅನ್ಯಾಯವಾಗಿದ್ದು, ತಕ್ಷಣವೇ ಮಳೆ ಪ್ರಮಾಣದ ವರದಿಯನ್ನು ಸ್ಥಳೀಯವಾಗಿ ಮಳೆ ಮಾಪನ ಮಾಡಿರುವ ರೈತರುಗಳಿಂದ ಪಡೆದು ಅದರಂತೆ ಅತ್ಯಂತ ಹೆಚ್ಚು ಮಳೆ ಬಿದ್ದಿರುವ ಪ್ರದೇಶಕ್ಕೆ ಘೋಷಿಸಿರುವ ಬೆಳೆ ವಿಮೆ ಮೊತ್ತವನ್ನು ಅಸಗೋಡು ಗ್ರಾಮ ಪಂಚಾಯಿತಿಗೂ ಸಹ ಘೋಷಿಸಿ ಸರ್ಕಾರ/ಇಲಾಖೆಯಿಂದ ನಡೆದಿರುವ ಪ್ರಮಾದವನ್ನು ಸರಿಪಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಅಸಗೋಡು ಗ್ರಾಮಸ್ಥರು ಶೃಂಗೇರಿ ಶಾಸಕ ಮತ್ತು ಕೊಪ್ಪ ತಹಸೀಲ್ದಾರ್ ಅವರಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ನಿರಂತರ ಆರು ತಿಂಗಳಿಗೆ ವಿಸ್ತರಿಸಿದ ಮಳೆಗಾಲ ಮತ್ತು ಅತಿಹೆಚ್ಚು ಪ್ರಮಾಣದ ಮಳೆ ಬಿದ್ದ ಕಾರಣ ನಿಯಂತ್ರಿಸಲಾಗದ ಅಡಿಕೆ ಕೊಳೆ ರೋಗ, ಕೈ ಮೀರಿ ವಿಸ್ತರಿಸಿದ ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಹಳದಿ ರೋಗಗಳ ಪರಿಣಾಮ ಮಲೆನಾಡಿನಲ್ಲಿ 90% ಗಿಂತ ಹೆಚ್ಚು ಬೆಳೆ ನಾಶ ಆಗಿದ್ದು, ರೈತರು ಬದುಕಿಗೆ ಮುಂದೇನು ಗತಿ ಎಂಬ ಚಿಂತೆ ಮತ್ತು ಆಘಾತದಲ್ಲಿರುವಾಗಲೇ, ಮಳೆ ಮಾಪನ ಯಂತ್ರದ ದುರಸ್ಥಿಯನ್ನೂ ಮಾಡದೆ, ಅವೈಜ್ಞಾನಿಕವಾದ ಲೆಕ್ಕಾಚಾರ ವಿಧಾನದಲ್ಲಿ ಅತ್ಯಂತ ಕಡಿಮೆ ವಿಮಾ ಪರಿಹಾರ ಹಂಚಿಕೆಯ ಘೋರ ಅನ್ಯಾಯಕ್ಕೆ ಮುಂದಾಗಿರುವುದು ಅಸಗೋಡು ಗ್ರಾಮದ ಅಡಿಕೆ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರು, ತಹಸೀಲ್ದಾರ್ ಮತ್ತು ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಈ ಬಗ್ಗೆ ಗಮನಹರಿಸಿ ಮಳೆ ಮಾಪನ ಯಂತ್ರ ಮತ್ತು ವಿಮಾ ಪರಿಹಾರದಲ್ಲಿ ಆಗಿರುವ ತಾಂತ್ರಿಕ ಲೋಪದೋಷಗಳನ್ನು ಬಗೆಹರಿಸಿ ಎಲ್ಲ ಅಡಿಕೆ ಬೆಳೆಗಾರರಿಗೂ ನ್ಯಾಯ ಒದಗಿಸಿಕೊಡಬೇಕಾಗಿದೆ.













