
ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿರುವ ಶಿಕ್ಷಕರ ನೇಮಕಾತಿ ತಾರತಮ್ಯ ಮತ್ತು ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಅಗತ್ಯ ಶಿಕ್ಷಕರ ಕೊರತೆ ಎದುರಾಗಿದ್ದು, ಹಲವಾರು ಬಾರಿ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ SDMC ಅಧ್ಯಕ್ಷರು, ಸದಸ್ಯರು, ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಎದುರು ಧರಣಿ ನಡೆಸಿದರು. ಅವರ ಅಭಿಪ್ರಾಯಕ್ಕೆ ತಕ್ಕಂತೆ, “ಈ ಹಾಳಾದ ನಿರ್ಲಕ್ಷ್ಯ ಮುಂದುವರಿದರೆ ಸರ್ಕಾರವೇ ಶಾಲೆಯನ್ನು ಮುಚ್ಚುವ ಸ್ಥಿತಿಗೆ ತಲುಪಬಹುದು” ಎಂಬ ಆತಂಕ ವ್ಯಕ್ತವಾಗಿದೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಶಾಲೆಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಹಿಂದೆ 80–90 ಇರುತ್ತಿದ್ದಲ್ಲಿ, ನಿರಂತರ ಕಡೆಗಣನೆ ಮತ್ತು ಸಿಬ್ಬಂದಿ ಕೊರತೆಯಿಂದ ಈಗ ಕೇವಲ 20ಕ್ಕೆ ಇಳಿದಿದೆ. SDMC ಸದಸ್ಯರು ತಿಳಿಸಿದ್ದಾರೆ, ಮೂರು ವರ್ಷಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ಶಿಕ್ಷಕರು ಇಲ್ಲ. ಅಧಿಕಾರಿಗಳಿಗೆ ಅನೇಕ ಬಾರಿ ಮನವಿ, ದೂರು, ಪತ್ರಗಳನ್ನು ನೀಡಿದರೂ ಯಾವುದೇ ಪರಿಣಾಮ ಕಂಡಿಲ್ಲ. ಗ್ರಾಮಸ್ಥರು, ಪೋಷಕರು ಒಟ್ಟಾಗಿ ನಡೆಸಿದ ಧರಣಿಯಲ್ಲಿ ಸರ್ಕಾರವು ತಕ್ಷಣ ಗಮನಹರಿಸಿ ಶಾಶ್ವತ ಶಿಕ್ಷಕರ ನೇಮಕಾತಿ ಮಾಡಬೇಕು, ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನೂ ನಡೆಸುವುದಾಗಿ ಎಚ್ಚರಿಸಿದರು.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರಿಗೆ ಹಲವು ಬಾರಿ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂಬ ಪ್ರಶ್ನೆಯನ್ನು ಸ್ಥಳೀಯರು ಕೇಳಿದ್ದಾರೆ.
SDMC ಅಧ್ಯಕ್ಷರಾದ ಪ್ರಕಾಶ್, ಹಾಗೂ ಸದಸ್ಯರು, ಗ್ರಾಮ ಪಂಚಾಂಯಿತಿ ಅಧ್ಯಕ್ಷ ಮನೋಜ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಜುನಾಥ್, ಗ್ರಾಮದ ಮುಖಂಡ ರಘುಪತಿ, ಆದರ್ಶ್, ಸತೀಶ್, ನಟೇಶ್, ಗೀತಾ, ಸುಮಾವತಿ, ವಿಜೇತ್ ಇನ್ನೂ ಮುಂತಾದ ಗ್ರಾಮಸ್ಥರು ಇದ್ದರು. (ವರದಿ- ತನು ಕೊಟ್ಟಿಗೆಹಾರ)













