
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಅಂಧ ಮಕ್ಕಳ ಶಾಲೆ, ಮೆಡಿಕಲ್ ಕಾಲೇಜು, ಸಂಸ್ಕೃತ, ಪದವಿ, ಬಿಎಡ್, ಇಂಜೀನಿಯರಿಂಗ್ ಸೇರಿದಂತೆ ಇತರೆ ಶಾಲಾ ಕಾಲೇಜುಗಳನ್ನು ತೆರೆದಿದ್ದು, ಇದರ ಹಿಂದಿನ ಉದ್ದೇಶ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಯೂ ಶಿಕ್ಷಣ ಪಡೆಯಬೇಕು ಎಂಬುದು ಪೂಜ್ಯರ ಉದ್ದೇಶವಾಗಿತ್ತು ಎಂದು ಜಯಪುರ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕ ಅರ್ಪಿತ ಡಿ. ಎನ್ ಹೇಳಿದರು.
ಇದನ್ನೂ ಓದಿ: 2 PUC ವಿದ್ಯಾರ್ಥಿಗಳಿಗೆ ಬಿಗ್ ಶಾಕ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ

ಜಯಪುರದ ಬಿಜಿಎಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ನಡೆದ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮಿಗಳ 80ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂದು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು, ವಾತಾವರಣ ಪರಿಶುದ್ದವಾಗಿರಲು ಗಿಡ ಮರಗಳಿರಬೇಕು ಎನ್ನುವ ಕಾರಣಕ್ಕೆ ಐದು ಕೋಟಿ ಸಸಿಗಳನ್ನು ನೆಡುವ ಕೋಟಿ ವೃಕ್ಷಾ ಅಭಿಯಾನವನ್ನು ಆರಂಭಿಸಿದ ಮಹಾನ್ ಸಂತರು ಪರಮಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳು ಎಂದರು.

ಭೂಮಿ, ನೀರು, ಗಾಳಿ, ಆಕಾಶ ಹಾಗೂ ಅಗ್ನಿ ಒಳಗೊಂಡಿರುವ ಪಂಚ ಭೂತಗಳು ಕಲುಷಿತವಾದರೆ ಮಾನವ ಜನಾಂಗಕ್ಕೆ ಉಳಿವಿಲ್ಲ ಎನ್ನುವುದನ್ನು ಅರಿತು, 5 ಕೋಟಿ ವೃಕ್ಷ ನೆಡುವ ಅಭಿಯಾನವನ್ನು ಆರಂಭಿಸಿದರು. ಎತ್ತಿನಗಾಡಿಯ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಹತ್ತಿರದಲ್ಲಿ ಇಲ್ಲ ಎಂಬ ಕಾರಣಕ್ಕೆ ಸಣ್ಣ ಹಳ್ಳಿಯಲ್ಲೇ ಸಾವಿರ ಬೆಡ್ ಗಳಿರುವ ಆಸ್ಪತ್ರೆ ಆರಂಭಿಸಿ ಮೆಡಿಕಲ್ ಕಾಲೇಜು ಪ್ರಾರಂಭಿಸಿ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ಸಿಗುವಂತೆ ಮಾಡಿದವರು.
ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್ ಮಾಡಿ…
ಪೋಷಕರಿಂದ ನಿರ್ಲಕ್ಷಿತರಾದ ಅಂಧ ಮಕ್ಕಳನ್ನು ಕಂಡು ಅವರಿಗಾಗಿ ರಾಮನಗರದಲ್ಲಿ ಅಂಧರ ಶಾಲೆ ಆರಂಭಿಸಿದ ಮಹಾನ್ ಸಂತರು ಪೂಜ್ಯರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಭಕ್ತರ ಮನೆ ಮನೆಗಳಲ್ಲಿ ಪಾದ ಕಾಣಿಕೆಯ ಮೂಲಕ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತು ಸಾವಿರ ಮೂಲ ಹಣದಲ್ಲಿ ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಿದರು.
ವರ್ಷದಲ್ಲಿ ಮೂರು ಬಾರಿ ಆದಿಚುಂಚನಗಿರಿಯಲ್ಲಿ ಜಾತ್ರೆ ನಡೆಸಿ ಅಲ್ಲಿಗೆ ವಿವಿಧ ಕಲಾ ತಂಡಗಳನ್ನು ಕರೆಸಿ ಅನೇಕ ಕಲಾ ಪ್ರಕಾರಗಳನ್ನು ಬೆಳೆಸಿದ ಮಹಾನ್ ಸಂತರು ಪೂಜ್ಯರು. ಸೇವಾರತ್ನ, ಗೌರವ ಡಾಕ್ಟರೇಟ್, ಪದ್ಮ ಭೂಷಣ ಪ್ರಶಸ್ತಿಯನ್ನು ತಮ್ಮ ಸೇವೆಯ ಕಾರಣಕ್ಕೆ ಪಡೆದಿರುವ ಪೂಜ್ಯರ ಆದರ್ಷವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಉತ್ತಮ ಬದುಕು ಸಾಗಿಸೋಣ ಎಂದರು.
ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಇನ್ನು ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಮುಸ್ತಾಕ್ ಅಹಮದ್, ಪಿಯುಸಿ ಪ್ರಾಂಶುಪಾಲ ಮುರುಳಿಧರ, ಉಪನ್ಯಾಸಕಿ ಗಾಯತ್ರಿದೇವಿ, ಆಂಗ್ಲ ಮಾದ್ಯಮ ಪ್ರೌಢಶಾಲೆಯ ಮುಖ್ಯೋಪದ್ಯಾಯ ಮಂಜಪ್ಪ ಕಂಬಳಿ, ಕನ್ನಡ ಮಾದ್ಯಮ ಮುಖ್ಯೋಪದ್ಯಾಯ ರವಿಚಂದ್ರ ಹಾಗೂ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಇತರರಿದ್ದರು.













