ಚಿಕ್ಕಮಗಳೂರು: ಗಾಂಜಾ ಪೆಡ್ಲರ್ ಗಳ ನಡುವೆ ಮಾರಾಮಾರಿ; ಲಾಂಗ್ ನಿಂದ ಹಲ್ಲೆ

ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಮಾರಾಟ ವಿಚಾರವಾಗಿ ಕಿರಿಕ್ ಆಗಿದ್ದು ಗಾಂಜಾ ಪೆಡ್ಲರ್ಗಳ ನಡುವೆಯೇ ಮಾರಾಮಾರಿ ನಡೆದಿದೆ, ಅದರಲ್ಲಿ ಓರ್ವ ಗಾಂಜಾ ಪೆಡ್ಲರ್ ಆದ ಇಬ್ರಾಹಿಂ ಎಂಬಾತನ ಮೇಲೆ ಲಾಂಗ್, ಡ್ರ್ಯಾಗರ್ ನಿಂದ ತೀವ್ರ ಹಲ್ಲೆ ಮಾಡಿರುವ ಘಟನೆಯು ಚಿಕ್ಕಮಗಳೂರು ನಗರದ ಗೌರಿಕಾಲುವೆ ಬಳಿ ನಡೆದಿದೆ.

 

ನದೀಂ ಎಂಬಾತನ ಸಹಚರರಾದ ಸಾಧಿಕ್, ಜುಲ್ಫಿಕರ್, ಜೀಷಾನ್ ಸೇರಿ ಐವರಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸದ್ಯ ಗಾಯಾಳು ಇಬ್ರಾಹಿಂನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಜಾ ಮಾರಾಟ ವಿಚಾರವಾಗಿ ಇಬ್ರಾಹಿಂ, ನದೀಂ ನಡುವೆ ಗಲಾಟೆ ಆಗಿದೆ. ಈ ವೇಳೆ ಇಬ್ರಾಹಿಂ ಮೇಲೆ ಹಲ್ಲೆ ನಡೆಸಿ ನದೀಂ ಮತ್ತು ತಂಡದವರು ಪರಾರಿಯಾಗಿದ್ದಾರೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಜೂಜು ಅಡ್ಡೆಯ ಮೇಲಿನ ದಾಳಿಗೂ ಕಾಡುಮಲ್ಲಿಗೆ ಎಸ್ಟೇಟ್’ಗೂ ಸಂಬಂಧವಿಲ್ಲ: ಎಸ್ಟೇಟ್ ಮಾಲೀಕರ ಸ್ಪಷ್ಟನೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಚಿನಕಲ್ ದುರ್ಗದ ಸಮೀಪ ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಾಡುಮಲ್ಲಿಗೆ ಎಸ್ಟೇಟ್ ಹೆಸರು ಪ್ರಸ್ತಾಪವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಎಸ್ಟೇಟ್ ನ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

 

ಏನಿದು ಪ್ರಕರಣ:
ಆಗಸ್ಟ್ 17 ರಂದು ಭಾನುವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಚಿಕ್ಕಮಗಳೂರು ಸೆನ್ ಠಾಣೆಯ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಹಣ, ಕಾರು, ಮೊಬೈಲ್ ಸೇರಿದಂತೆ ವಿವಿಧ ಪರಿಕರಗಳನ್ನು ವಶಪಡಿಸಿಕೊಂಡಿದ್ದರು.

ತಪ್ಪು ಗ್ರಹಿಕೆ:
ಇನ್ನು ಈ ಪ್ರಕರಣದಲ್ಲಿ ಸ್ಥಳೀಯ ಕಾಡುಮಲ್ಲಿಗೆ ಎಸ್ಟೇಟ್ ಹೆಸರು ಪ್ರಸ್ತಾಪವಾಗಿತ್ತು. ಪೊಲೀಸ್ ಎಫ್.ಐ.ಆರ್. ನಲ್ಲಿ ಕಾಡುಮಲ್ಲಿಗೆ ಎಸ್ಟೇಟ್ ಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಎಂದು ನಮೂದಿಸಲಾಗಿತ್ತು. ಆದರೆ ಮಾಧ್ಯಮಗಳಲ್ಲಿ ಕಾಡುಮಲ್ಲಿಗೆ ಎಸ್ಟೇಟ್ ಎಂದೇ ಪ್ರಸ್ತಾಪವಾಗಿತ್ತು. ಇದು ತಪ್ಪು ಗ್ರಹಿಕೆಯಿಂದ ಆಗಿದ್ದು ಈ ಬಗ್ಗೆ ಎಸ್ಟೇಟ್ ನ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಎಸ್ಟೇಟ್ ಮಾಲೀಕರ ಸ್ಪಷ್ಟನೆ ಏನು?;
ಈ ಬಗ್ಗೆ ಎಸ್ಟೇಟ್ ಮಾಲೀಕರಾದ ಮಧು ಆರ್ ಗೌಡ ಸ್ಪಷ್ಟನೆ ನೀಡಿದ್ದು, ದಿನಾಂಕ 27-08-2023 ನನ್ನ ತಮ್ಮ (ಮನು) ತೀರಿ ಹೋಗಿ 3 ವರ್ಷಗಳು (ನನ್ನ ತಂದೆ ತೀರಿ ಕೊಂಡಿದ್ದು ಇದೇ ತಿಂಗಳು 09 ನೇ ತಾರೀಕು. ಮುಂದಿನ ಭಾನುವಾರ ಅವರ ತಿಂಗಳ ಕಾರ್ಯ) ನನ್ನ ಇಬ್ಬರು ಚಿಕ್ಕಪ್ಪಂದಿರ ಕುಟುಂಬದೊಂದಿಗೆ ಆ ದಿನದ ಕಾರ್ಯಕ್ಕೆ ತಯಾರಿಯಲ್ಲಿದ್ದೆ. ಮಧ್ಯಾಹ್ನ ನನ್ನ ಸ್ನೇಹಿತ ಒಬ್ಬ ಕರೆ ಮಾಡಿ ನನ್ನ ತೋಟದ ಪಕ್ಕದಲ್ಲಿ ಪಾಳು ಬಿದ್ದಿರುವ 40 ಎಕರೆ ತೋಟದಲ್ಲಿ 10-12 ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದಾಗಿ ತಿಳಿಸಿದ. ಯಾವುದೇ ಅಹಿತಕರ ಘಟನೆ ನಡೆಯದಂತೆ ವರ್ಷಗಳ ಕಾಲ ನಾನು ಸಂಪಾದಿಸಿದ ಹೆಸರಿಗೆ ಧಕ್ಕೆ ತರದಂತೆ ಹೇಳಿದೆ. ಸಂಜೆ 5 ಗಂಟೆ ಸುಮಾರಿಗೆ ನಾನು ತಿಥಿ ಕಾರ್ಯಕ್ಕೆ ಬೇಕಾದ ದಿನಸಿ ಸಾಮಾನುಗಳನ್ನು ಮತ್ತು ಮಾಂಸ ತರಲು ಆಲ್ದೂರು ಹೋದೆ.
ನಾನು ಮನೆಗೆ ಬಂದಾಗ ಸುಮಾರು 7.15 ಅಗಿತ್ತು ರಾತ್ರಿ ನನ್ನ ಚಿಕ್ಕಮ್ಮಂದಿರು ಅಡಿಗೆ ತಯಾರಿಯಲ್ಲಿ ಇದ್ದರು. ಬಂದು ನೋಡಿದಾಗ ನನ್ನ ಗಮನಕ್ಕೆ ಬಾರದೇ 4 ವಾಹನಗಳು ನನ್ನ ಮನೆಯ ಆವರಣದಲ್ಲಿ ಇದ್ದವು. ನನಗೆ ಗುರುತು ಇರದ ಕೆಲವು ವ್ಯಕ್ತಿಗಳು ನನ್ನ ಗೇಟ್ ಅಕ್ಕ ಪಕ್ಕದಲ್ಲಿ ಇದ್ದರು. ಮುಜುಗರ ಮತ್ತು ಸಿಡಿಮಿಡಿಗೊಂಡ ನಾನು ಅವರನ್ನು ಕರೆದು ಬೈದು ಎರಡು ವಾಹನಗಳನ್ನು ಗೇಟ್ ನಿಂದ ಹೊರಗೆ ಹಾಕಿಸಿ ಇನ್ನೆರಡು ವಾಹನ ಹೊರಗೆ ಹಾಕಿಸುವಷ್ಟರಲ್ಲಿ ಪೊಲೀಸ್ ಇಲಾಖೆ ದಾಳಿ ನಡೆಸಿತು.

 

ನನ್ನ ಮನೆಯ ಆವರಣದಲ್ಲಿ ಇದ್ದ ಬೇರೆ ಬೇರೆ ಜಿಲ್ಲೆಯ ಪಾಸಿಂಗ್ ಹೊಂದಿದ್ದ ಆ ಎರಡು ವಾಹನಗಳು ಪೊಲೀಸ್ ಇಲಾಖೆಗೆ ನನ್ನ ಮೇಲೆ ಅನುಮಾನ ಬರಲು, ನನ್ನ ಹೆಸರನ್ನು ಎಫ್.ಐ ಆರ್ ನಲ್ಲಿ ಸೇರಿಸಲು ಕಾರಣವಾಯಿತು. ದಿಢೀರ್ ದಾಳಿ ಅರಿವಾದ ಹಿನ್ನೆಲೆಯಲ್ಲಿ ತಕ್ಷಣಕ್ಕೆ ನಾನು ಪೊಲೀಸ್ ನವರ ಮುಂದೆ ಬರಲು ಆಗಲಿಲ್ಲ. ಆ ಕ್ಷಣದಲ್ಲಿ ಇಲಾಖೆಯವರು ನನ್ನ ವಾಸ್ತವ ಪರಿಸ್ಥಿತಿ ತಿಳಿಯುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನನ್ನ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯದ ಬಗ್ಗೆ ತಿಳಿದ ಕೆಲ ಪೊಲೀಸರು ಹೆಂಗಸರಿದ್ದ ಮನೆಯ ಒಳಗೂ ಬಂದಿಲ್ಲ. ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದು ಹೋದ ನಂತರ ರಾತ್ರಿ 10.30 ರ ಮೇಲೆ ನಾನು ಮನೆಗೆ ಬಂದು ತಮ್ಮನ ಗಿಂಡಿಗೆ ಪೂಜೆ ಮಾಡಿದೆ. (ನನ್ನ ಈ ಪರಿಸ್ಥಿತಿಗೆ ಕಾರಣ ಆದವರ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತೇನೆ). ಗಿಂಡಿಗೆ ಎಡೆಗೆ ಇಡಲು ತಂದಿದ್ದ ಎರಡು ಕ್ವಾರ್ಟರ್ ಎಣ್ಣೆ, ತಮ್ಮ ಇದ್ದಾಗ ಕುಡಿಯುತ್ತಿದ್ದ ಬಿಯರ್, ಒಂದು ದೊಡ್ಡ ಟಾರ್ಚ್, ಶೆಡ್ ನಲ್ಲಿದ್ದ ಬೈಕಿನ ಬ್ಯಾಗಿಂದ ಪೊಲೀಸರು ತೆಗೆದುಕೊಂಡು ಹೋಗಿದ್ದರು. ದೇವರನ್ನು ನಂಬುವ ಜೊತೆಗೆ, ನಾವು ಮಾಡುವ ಒಳ್ಳೆಯ ಕೆಲಸಗಳು ದೇವರ ರೂಪದಲ್ಲಿ ನಮ್ಮನ್ನು ಕಾಪಾಡುತ್ತದೆ ಎಂದು ನಂಬುವ ನಾನು ಆ ದಿನ ನಡೆದ ಘಟನೆ ಬಗ್ಗೆ ತಿಳಿಸಿದ್ದೇನೆ.

ಪೊಲೀಸ್ ಇಲಾಖೆ ಹಾಗೂ ಮಾದ್ಯಮ ಮಿತ್ರರಿಗೆ ತಿಳಿಸುವುದೇನೆಂದರೆ. ನನಗೆ 25 ಎಕರೆ ಕಾಫಿ ತೋಟವಿದ್ದು, ನಾನು ನನ್ನ ತೋಟದ ಕಾರ್ಮಿಕರೊಂದಿಗೆ ಶ್ರಮ ಹಾಕಿ ದುಡಿಯುತ್ತೇನೆ. ನನಗೆ ಕೃಷಿ ಬಿಟ್ಟು ಯಾವುದೇ ಕೆಲಸ ಬರುವುದಿಲ್ಲ. ಹಾಗೇ ಕೃಷಿ ವರಮಾನ ಬಿಟ್ಟು ಯಾವುದೇ ಒಂದು ರೂಪಾಯಿ ಬೇರೆ ವರಮಾನ ಇರುವುದಿಲ್ಲ. ಇದರಲ್ಲೇ ನಾನು ನೆಮ್ಮದಿಯಿಂದ ಜೀವನ ಸಾಗಿಸುತ್ತ ಇದ್ದೇನೆ. ನನಗೆ ಇಲ್ಲಿಯವರೆಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಅಪರಾಧ ಹಿನ್ನೆಲೆ ಇರುವುದಿಲ್ಲ. ಮುಂದೆಯೂ ಇರುವುದಿಲ್ಲ. ಎಫ್.ಐ.ಆರ್ ನಲ್ಲಿರುವ ನನ್ನ ಮೇಲಿನ ಆರೋಪ ಕೇವಲ ಆರೋಪವೇ ಹೊರತು ಅದು ಸತ್ಯ ಆಗಲು ಎಂದಿಗೂ ಸಾಧ್ಯವಿಲ್ಲ. ಇನ್ನೊಂದು ಸತ್ಯವಾದ ವಿಷಯ ಏನೆಂದರೆ ನನಗೆ ಇಸ್ಪೀಟ್ನಲ್ಲಿ ಮಕ್ಕಳು ಆಡುವ 3 ನಂಬರ್ ಎಲೆ ಜೋಡಿಸುವ ಆಟ ಬಿಟ್ಟು ಬೇರೆ ಯಾವುದೇ ಆಟ ಬರುವುದಿಲ್ಲ. ನಾನು ಇಸ್ಪೀಟ್ ಆಡುವ ಜಾಗದಲ್ಲಿ ನಿಲ್ಲುವುದೂ ಇಲ್ಲ ಆಡುವುದನ್ನು ನೋಡುವುದೂ ಇಲ್ಲ. ಅಲ್ಲದೇ ನನಗೆ ಯಾವುದೇ ರೀತಿಯ ಬೆಟ್ಟಿಂಗ್ ಅಭ್ಯಾಸ ಕೂಡ ಇಲ್ಲ. ನಾನು ಸದಾ ಸಜ್ಜನರ ಸಹವಾಸ ಮಾತ್ರ ಮಾಡಲು ಬಯಸುತ್ತೇನೆ.

ನನ್ನ ಎಸ್ಟೇಟ್ ಒಳಗೆ ಈ ಹಿಂದೆಯೂ ಯಾವುದೇ ಕಾನೂನು ಬಾಹಿರ ಅಥವಾ ಅಪರಾಧ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿಲ್ಲ, ಮುಂದೆ ಕೊಡುವುದೂ ಇಲ್ಲ. ಇಂದು ಪೊಲೀಸ್ ಇಲಾಖೆಗೆ ಸಂವಿಧಾನ ಹಾಗೂ ಸರ್ಕಾರ ಕೊಟ್ಟಿರುವ ಸವಲತ್ತುಗಳನ್ನು ಬಳಸಿ ನಾನು ಮೇಲೆ ಹೇಳಿರುವುದು ಸತ್ಯವಾ ಸುಳ್ಳಾ ಅಂತ ತಿಳಿಯುವುದು ಕಷ್ಟ ಆಗಲಾರದು. ಪೊಲೀಸ್ ಇಲಾಖೆ ಮತ್ತು ನನಗೆ ಬಹಳ ಹಿಂದಿನಿಕದಲೂ ಒಳ್ಳೆಯ ರೀತಿಯ ಸಂಪರ್ಕ ಇದೆ. ಅನೇಕ ನನ್ನ ಸ್ನೇಹಿತರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. Pc, PSI, PI, ಹಾಗೂ ಅದಕ್ಕೂ ದೊಡ್ಡ ಮಟ್ಟದ ಅಧಿಕಾರಿಗಳೊಂದಿಗೆ. ವೈಯುಕ್ತಿಕವಾಗಿ ಒಳ್ಳೆಯ ಸಂಬಂಧವಿದೆ. ಹಾಗೇ ಸರ್ಕಾರದ ಅನೇಕ ಇಲಾಖೆ ಅಧಿಕಾರಿಗಳೊಂದಿಗೆ, ರಾಜಕೀಯ, ಸಮಾಜದ ಗಣ್ಯ ವ್ಯಕ್ತಿಗಳೊಂದಿಗೂ ಕೂಡ ಒಳ್ಳೆಯ ರೀತಿ ಸಂಬಂಧ ಇದೆ. ಆದರೆ ಅದನ್ನು ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಎಂದೂ ದುರುಪಯೋಗ ಮಾಡಿಕೊಂಡಿಲ್ಲ. ಅದರ ಒಂದು ಭಾಗವೇ ಎಫ್.ಐ.ಆರ್ ನಲ್ಲಿ ನನ್ನ ಹೆಸರು ಬರುವ ಹಾಗಾಗಿದ್ದು.

ನಾನು ಎಂದಿಗೂ ಗುರುತಿಸಿಕೊಳ್ಳಲು ಇಷ್ಟ ಪಡುವುದು ಕಾನೂನು ಬಾಹಿರ, ಅಪರಾಧ ಜಗತ್ತಿನಲ್ಲಿ ಅಲ್ಲ, ಬದಲಾಗಿ ಒಬ್ಬ ಯಶಸ್ವಿ ಮಾದರಿ ಕೃಷಿಕ ಆಗಿ ಮಾತ್ರ. ಇಷ್ಟೇ ನನ್ನ ಪ್ರಪಂಚ. ಮಾಡದ ತಪ್ಪಿಗೆ ಅವಮಾನ ಅನುಭವಿಸುವ ಶಕ್ತಿಯನ್ನು ಈ ಜೀವನ ಪಾಠ ಕಲಿಸಿದೆ ಎಂದು ಎಸ್ಟೇಟ್ ಮಾಲೀಕರ ಮಧು ಆರ್ ಗೌಡ ಸ್ಪಷ್ಟನೆ ನೀಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.