ಭದ್ರಾವತಿ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯ ಆವರಣದಲ್ಲಿ ಸೋಮವಾರ ಸಂಜೆ ಭಾರಿ ಗಾತ್ರದ ಕಬ್ಬಿಣದ ರಾಡ್ (ಬಿಲ್ಲೆಟ್)ಗಳನ್ನು ಅನ್ಲೋಡ್ ಮಾಡುವಾಗ ಕ್ರೇನ್ನ ಉಕ್ಕಿನ ಸರಪಳಿ ಏಕಾಏಕಿ ತುಂಡಾಗಿ, ಬಿಲ್ಲೆಟ್ ಮೈಮೇಲೆ ಬಿದ್ದಿದ್ದರಿಂದ ಗುತ್ತಿಗೆ ಕಾರ್ಮಿಕ ವಿನೋದ್ ಎಸ್ (36) ಮೃತಪಟ್ಟಿದ್ದಾರೆ.
ವ್ಯಾಗನ್ನಲ್ಲಿದ್ದ ಕಬ್ಬಿಣದ ತುಂಡುಗಳನ್ನು ಕೆಳಕ್ಕೆ ಇಳಿಸುವಾಗ ಉಕ್ಕಿನ ಸರಪಳಿ ತುಂಡಾಗಿ, ಕಬ್ಬಿಣದ ಬಿಲ್ಲೆಟ್ ಒಂದು ವಿನೋದ್ ಮೇಲೆ ಬಿದ್ದ ಪರಿಣಾಮ ಅವರ ಸೊಂಟ, ಹೊಟ್ಟೆ ಹಾಗೂ ತೊಡೆ ಭಾಗಕ್ಕೆ ತೀವ್ರ ಏಟು ಬಿದ್ದು ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅವರು ರಾತ್ರಿ ಮೃತಪಟ್ಟಿದ್ದಾರೆ.

“ವಿನೋದ್ಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಅವರ ಸಾವಿನಿಂದಾಗಿ ಕಾರ್ಮಿಕ ಸಮೂಹ ಶೋಕದಲ್ಲಿ ಮುಳುಗಿದೆ. ಸಂಘದ ಪದಾಧಿಕಾರಿಗಳು ಕಾರ್ಖಾನೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದೆ ಇಂತಹ ಅವಘಡಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದೇವೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅವರ ಪತ್ನಿಗೆ ಅನುಕಂಪದ ಆಧಾರದಲ್ಲಿ ಕಾಯಂ ನೌಕರಿ ನೀಡುವಂತೆ ಸಲ್ಲಿಸಿದ ಮನವಿಗೆ ಕಾರ್ಖಾನೆಯ ಮಾನವ ಸಂಪನ್ಮೂಲ ಮುಖ್ಯ ಪ್ರಬಂಧಕ ವಿಶ್ವನಾಥ್ ಬಿ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಐಎಸ್ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಅಮೃತ್ ಹೇಳಿದರು.

















